ನಮ್ಮ ಕರ್ನಾಟಕ ಪ್ರವಾಸಿ ತಾಣಗಳಿಗೆ ಪ್ರಸಿದ್ದಿಯಾಗಿದೆ. ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರಿಗೆ ಪ್ರಕೃತಿ, ಇತಿಹಾಸ, ಸ್ಪಿರಿಚುಯಾಲಿಟಿಯ ಮಿಶ್ರಣ ಸಿಗುತ್ತದೆ. ಈ ವಿಡಿಯೋದಲ್ಲಿ ನಾವು ಕರ್ನಾಟಕದ 8 ಪ್ರಸಿದ್ಧ ಪ್ರವಾಸಿ ತಾಣಗಳ ಬಗ್ಗೆ ತಿಳಿಸುತ್ತಿದ್ದೇವೆ. ಹೀಗಾಗಿ ವೀಡಿಯೋ ನೋಡಿ.
Watch Video
1. ಗುಹಾಲಯಗಳಿಂದಲೇ ಪ್ರಸಿದ್ಧಿಯಾದ ಬಾದಾಮಿ.
ಆಳವಾದ ಕಮರಿನಲ್ಲಿ ನೆಲೆಸಿರುವ ಬಾದಾಮಿಯು ಹೊನ್ನಿನ ಬಣ್ಣದ ಕಲ್ಲು ಬಂಡೆಗಳ ಪರ್ವತಗಳಿಂದ ಸುತ್ತುವರಿದಿದೆ. ಬಾದಾಮಿಯನ್ನು ಹಿಂದೆ ವಾತಾಪಿ ಎಂದು ಕರೆಯಲಾಗುತ್ತಿತ್ತು. ಇದು ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅತ್ಯಂತ ವೈವಿಧ್ಯಮಯ ದೇವಾಲಯಗಳ ನಿರ್ಮಾಣಗಳಿಗೆ ಸಾಕ್ಷಿಯಾದ ಪಟ್ಟಣವಾಗಿದೆ.
Badami, Karnataka
ಬಾದಾಮಿ 6ನೇ ಶತಮಾನದಿಂದ 8ನೇ ಶತಮಾನದವರೆಗೆ ಚಾಲುಕ್ಯ ರಾಜವಂಶದ ರಾಜಧಾನಿಯಾಗಿತ್ತು. ಇದು ಅಗಸ್ತ್ಯ ನದಿಯ ಸುತ್ತಲೂ ಇರುವ ತನ್ನ ಗುಹೆ ದೇವಾಲಯಗಳಿಗೆ ಪ್ರಸಿದ್ಧಿ ಹೊಂದಿದೆ.
2. ವಿಜಯಪುರದಲ್ಲಿ ನೊಡಬೇಕಾದ ಸ್ಥಳಗಳಿವು.
Chand Bawdi, Vijayapura
ವಿಜಯಪುರದಲ್ಲಿ ಗೋಳಗುಮ್ಮಟ ಅಷ್ಟೇ ಅಲ್ಲದೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು. ಮಲ್ಲಿಕಾ ಎ ಮೈದಾನ, ಉಪಲಿ ಬುರ್ಜ್, ಚಾಂದ ಬಾವಡಿಯಂತಹ ಐತಿಹಾಸಿಕ ಕಟ್ಟಡಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. 200 ಲಕ್ಷ ಮೀ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ, ದೊಡ್ಡ ನೀರಿನ ಟ್ಯಾಂಕ್ ಆಗಿನ ಕಾಲದಲ್ಲೇ ನಿರ್ಮಿಸಲಾಗಿತ್ತು. ಅದು ಈಗಲೂ ಸುಸ್ಥಿತಿಯಲ್ಲಿದೆ. ವಿಜಯಪುರಕ್ಕೆ ದೇಶದ ಹಲವೆಡೆಯಿಂದ ರೈಲು ವ್ಯವಸ್ಥೆ ಇದೆ.
3. ಜೈನರ ಪವಿತ್ರ ಕ್ಷೇತ್ರ ಶ್ರವಣಬೆಳಗೊಳ.
Sharvanabelagola
ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳ ಜೈನರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ತಲಕಾಡಿನ ಗಂಗರ ಆಳ್ವಿಕೆಯಲ್ಲಿ ಶಿಲ್ಪಕಲೆ ಉತ್ತುಂಗಕ್ಕೆ ಏರಿದ ಕ್ಷೇತ್ರ ಇದಾಗಿದೆ. ಇಲ್ಲಿ ಚಂದ್ರಗಿರಿ ಮತ್ತು ವಿಂಧ್ಯಗಿರಿ ಎಂಬ ಎರಡು ಬೆಟ್ಟಗಳು ಇದೆ. ಈ ಬೆಟ್ಟಗಳಲ್ಲಿ ಆಚಾರ್ಯ ಭದ್ರಬಾಹು ಹಾಗೂ ಚಂದ್ರಗುಪ್ತ ಮೌರ್ಯರು ಧ್ಯಾನ ಮಾಡಿದ್ದರು ಎನ್ನಲಾಗುತ್ತದೆ. ರಾಷ್ಟ್ರಕೂಟರು ಇಲ್ಲಿ ಅಂತಿಮ ಆಳ್ವಿಕೆ ನಡೆಸಿದರು. ಖ್ಯಾತ ಗೊಮ್ಮಟೇಶ್ವರ ಮೂರ್ತಿಯು ಇಲ್ಲಿನ ವಿಂಧ್ಯಗಿರಿ ಬೆಟ್ಟದ ಮೇಲಿದೆ.
4. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ದಾಂಡೇಲಿ.
River Rafting
ದಟ್ಟ ಕಾಡಿನ ಮಧ್ಯೆ ಕಾಳಿ ನದಿ ದಡದಲ್ಲಿರುವ ಚಿಕ್ಕ ನಗರವಾದ ದಾಂಡೇಲಿಯು, ಕಾಗದ ಕೈಗಾರಿಕೆಗೆ ಹೆಸರುವಾಸಿಯಾಗಿದೆ. ದಾಂಡೇಲಿ(dandeli) ಪ್ರವಾಸಿಗರಿಗೆ ಸ್ವರ್ಗವಾಗಿದೆ. ಪ್ರವಾಸಿಗರು ಇಲ್ಲಿ ಜಲಪಾತ, ಅರಣ್ಯ, ವನ್ಯಧಾಮಕ್ಕೆ ಭೇಟಿ ನೀಡಿ ಪ್ರಕೃತಿಯ ಆನಂದವನ್ನು ಪಡೆಯುತ್ತಾರೆ. ಇಲ್ಲಿರುವ ವನ್ಯಜೀವಿ ಧಾಮವು ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿದೆ. ಅಲ್ಲದೇ ದಾಂಡೇಲಿ "ರಿವರ್ ರಾಫ್ಟಿಂಗ್" ಪ್ರಿಯರಿಗೆ ನೆಚ್ಚಿನ ತಾಣವಾಗಿದೆ.
5. ಅದ್ಭುತವಾದ ಶಿಲ್ಪಕಲೆಗಳ ಬೀಡು 'ಐಹೊಳೆ-ಪಟ್ಟದಕಲ್ಲು'.
Aivole Temple
ಸುಂದರ ಕೆತ್ತನೆ ಹಾಗೂ ಅದ್ಭುತ ಶಿಲ್ಪಕಲೆಯಿಂದ ಕೂಡಿರುವ ಐಹೊಳೆ-ಪಟ್ಟದಕಲ್ಲು ಎಂಬ ಅವಳಿ ಪ್ರವಾಸಿ ತಾಣಗಳು ದೇವಾಲಯಗಳಿಗೆ ಬಲು ಪ್ರಸಿದ್ಧಿಯಾಗಿದೆ. ಐಹೊಳೆಯಲ್ಲಿ 6ನೇ ಶತಮಾನದಿಂದ 12ನೆಯ ಶತಮಾನದಲ್ಲಿ ನಿರ್ಮಾಣವಾಗಿರುವ ದೇವಾಲಯಗಳನ್ನು ಕಾಣಬಹುದಾಗಿದ್ದು, ನೂರಕ್ಕೂ ಅಧಿಕ ಪುರಾತನ ದೇವಾಲಯಗಳನ್ನು ಕಾಣಬಹುದಾಗಿದೆ. ಮಲಪ್ರಭಾ ನದಿಯ ಎಡದಂಡೆಯ ಮೇಲೆ ನೆಲೆಸಿರುವ ಪಟ್ಟದಕಲ್ಲು ಸಹ ಆಕರ್ಷಕ ಶಿಲ್ಪ ಕೆತ್ತನೆಗಳಿಂದ ಕೂಡಿದ ದೇವಾಲಯ ಸಂಕೀರ್ಣಕ್ಕೆ ಹೆಸರುವಾಸಿಯಾಗಿದೆ.
6. ಅಪ್ಸರೆಯಂಥ 'ಅಪ್ಸರಕೊಂಡ'.
Apsarakonda, Uttara Kannada
ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕಾಸರಕೋಡ ಸಮೀಪದ ಅಪ್ಸರಕೊಂಡ ಜಲಪಾತವು ರಾಷ್ಟ್ರೀಯ ಹೆದ್ದಾರಿ 66ರಿಂದ 2 ಕಿಲೋಮೀಟರ್ ಅಂತರದಲ್ಲಿದೆ. ಜನರು ಹೇಳುವ ಪ್ರಕಾರ ಇಲ್ಲಿ ಅಪ್ಸರೆಯರು ವಾಸಿಸುತ್ತಿದ್ದರಂತೆ, ಹೀಗಾಗಿ ಈ ಜಲಪಾತಕ್ಕೆ ಅಪ್ಸರಕೊಂಡ ಎಂಬ ಹೆಸರು ಬಂದಿದೆ. ವರ್ಷದ ಎಲ್ಲಾ ದಿನವೂ ಧುಮುಕುವ ಈ ಜಲಪಾತವು ಹಾಲ್ನೊರೆಯಂತೆ ಸುರಿಯುತ್ತದೆ. ಇದು ಹೊನ್ನಾವರದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿದೆ.
7. ಮಂಡಗದ್ದೆ ಪಕ್ಷಿಧಾಮ.
Mandagadde Bird Sanctuary
ಶಿವಮೊಗ್ಗದಲ್ಲಿ ಸುಮಾರು 1.14 ಎಕರೆ ಪ್ರದೇಶದಲ್ಲಿ ಹಬ್ಬಿರುವ ಮಂಡಗದ್ದೆ ಪಕ್ಷಿಧಾಮ ತುಂಗಾ ನದಿಯ ಮಧ್ಯದಲ್ಲಿರುವ ದ್ವೀಪವಾಗಿದೆ. ಮಂಡಗದ್ದೆಗೆ ಹೋಗುವ ದಾರಿಯಲ್ಲಿ ಸಕ್ರೆಬೈಲು ಆನೆ ಶಿಬಿರ ಮತ್ತು ಗಾಜನೂರು ಡ್ಯಾಂ ನೋಡಬಹುದು. ಮಂಡಗದ್ದೆ ಪಕ್ಷಿಧಾಮ ವಿಹಾರಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಪಕ್ಷಿ ವೀಕ್ಷಣೆ ಹಾಗೂ ನಿಸರ್ಗ ಸೌಂದರ್ಯದ ಆಸ್ವಾದನೆಗೆ ಅರಣ್ಯ ಇಲಾಖೆ ದೋಣಿ ವ್ಯವಸ್ಥೆ ಕಲ್ಪಿಸಿದೆ. ಇಲ್ಲಿಗೆ ಭೇಟಿ ನೀಡಲು ಜುಲೈನಿಂದ ನವೆಂಬರ್ ತಿಂಗಳು ಸೂಕ್ತವಾದ ಸಮಯವಾಗಿದೆ.
8. ದಾವಣಗೆರೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿವು.
Santhisagara, Davangere
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿರುವ ಹರಿಹರೇಶ್ವರ ದೇವಸ್ಥಾನ ಪ್ರಮುಖ ಆಕರ್ಷಣೆಯಾಗಿದೆ. ಸಂತೇಬೆನ್ನೂರು ಪುಷ್ಕರಣಿ ದಾವಣಗೆರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶಾಂತಿಸಾಗರ ಕೆರೆ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು 18 ಕಿಲೋಮೀಟರ್ ದೂರದಲ್ಲಿದೆ. ಇದು ಏಷ್ಯಾದಲ್ಲೇ 2ನೇ ಅತಿದೊಡ್ಡ ನಿರ್ಮಿಸಿದ ಕೆರೆಯಾಗಿದೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ.
Don't forget to Comment your opinion on this Article.
0 Comments